Feeds:
Posts
Comments

ಅದೊಂದು ಮೂರು ವರ್ಷದ ಮಗು. ಎಚ್ಚರ ಇದ್ದಷ್ಟೂ ಹೊತ್ತು ಒಂದು ಕ್ಷಣ ದಂಡ ಮಾಡದೆ ಮಾತನಾಡಿ ತಲೆ ತಿನ್ನುವ ಅದರ ಸಾಮರ್ಥ್ಯ ಎಂಥವರನ್ನೂ ಕಂಗೆಡಿಸುತ್ತದೆ. ಒಂದು ಮನುಷ್ಯ ತನ್ನ ಜೀವಿತಾವಧಿಯಲ್ಲಿ ಇಂತಿಷ್ಟೇ ಮಾತನಾಡುತ್ತಾನೆ ಎಂದೇನಾದರೂ ಆ ಭಗವಂತ ಬರೆದುಬಿಟ್ಟಿದ್ದರೆ ಆ ಮಗುವಿನ ಕೋಟಾ ಈಗಾಗಲೇ ಖರ್ಚಾಗಿ ಹೋಗುತ್ತಿತ್ತೇನೊ! `ದವಡೆ ಕರಗಿಹೋದೀತು ಸುಮ್ನಿರೇಎಂದು ನಾನೂ ಹಲವಾರು ಬಾರಿ ಅಲವತ್ತುಕೊಂಡಿದ್ದೇನೆ.

ಬಿಡಿ ವಿಷಯ ಅದಲ್ಲ. ಅವಳ ಮಾತಿನಲ್ಲಿ, ಆಟದಲ್ಲಿ ಅರ್ಧಕ್ಕರ್ಧ ಬರುವ ವಿಷಯ ಅಪ್ಪ-ಅಮ್ಮ-ಮಗು. ಇವಳ ವಯಸ್ಸಿನ ಹಲವಾರು ಮಕ್ಕಳನ್ನು, ಅದರಲ್ಲೂ ಹೆಣ್ಣು ಮಕ್ಕಳನ್ನು ಕಂಡಾಗ ಅವರಾಡುತ್ತಿದ್ದಿದ್ದೂ ಅಪ್ಪ-ಅಮ್ಮ-ಮಗುವಿನಾಟವೇ. ಅವುಗಳಿಗೆ ಉಣಿಸಿ-ತಿನಿಸಿ, ಸ್ನಾನ ಮಾಡಿಸಿ, ಶಾಲೆಗೆ ಕಳಿಸಿಒಟ್ಟಾರೆ ಇಡೀ ದಿನ ತಮ್ಮ ಅಮ್ಮ-ಅಪ್ಪ ತಮಗೆ ಏನೆಲ್ಲಾ ಮಾಡುತ್ತಾರೊ ಅದೆಲ್ಲವನ್ನೂ ತಮ್ಮ ಗೊಂಬೆಗೆ ಪ್ರೀತಿಯಿಂದ ಮಾಡುತ್ತಾರೆ. ಮಕ್ಕಳ ಅಗ್ದಿ ಸಹಜ ಗುಣವದು.

ಇವಳೂ ಹಾಗೆ. ಕೈಯಲ್ಲಿರುವ ಬೊಂಬೆಗಳು, ಬೀದಿಯಲ್ಲಿ ಕಾಣುವ ನಾಯಿಗಳು, ಕೊಳದಲ್ಲಿರುವ ಬಾತುಕೋಳಿ, ಹಾರುವ ಹಕ್ಕಿ ಹಿಂಡು, ಕೊನೆಗೆ ಗೋಡೆ ಮೂಲೆಯ ಇರುವೆ ಸಾಲು ಕಂಡಾಗಲೂ ಅವುಗಳಲ್ಲಿ ಅಪ್ಪ/ಅಮ್ಮ/ಮಗು ಯಾರು ಎಂಬುದನ್ನು ನಿರ್ಧರಿಸಲು ತಾಸುಗಟ್ಟಲೆ ಚರ್ಚಿಸುತ್ತಾಳೆ. ಒಂದೊಮ್ಮೆ ಯಾವುದೇ ಜೀವಿಗಳು ಕಾಣದಿದ್ದರೆ ಚಿಂತೆಯಿಲ್ಲ, ಡೈನಿಂಗ್ ಚೇರ್ ಗಳ ಪೈಕಿ ಯಾವುದು ಅಮ್ಮ ಯಾವುದು ಮಗು ಎಂದು ಶುರು ಹಚ್ಚುತ್ತಾಳೆ. ಕತೆಯಲ್ಲೊಂದು ಮಂಗವೊ, ಕರಡಿಯೊ ಬಂದರೆ ಅದು ಅಪ್ಪನೊ, ಅಮ್ಮನೊ ಎಂಬುದು ಅವಳಿಗೆ ಜೀವನ್ಮರಣದ ಪ್ರಶ್ನೆಯಾಗುತ್ತದೆ. `ಯಾವುದು ಏನಾದರೇನು? ಮೊದಲು ಬಾಯಿ ಮುಚ್ಚು ಎಂದು ಎದುರು ಕುಂತವ ಕೂದಲು ಕಿತ್ತುಕೊಳ್ಳುವ ಸ್ಥಿತಿ ನಿರ್ಮಿಸುತ್ತಾಳೆ.

ಹಾಗಾದರೆ ಆ ವಯಸ್ಸಿನ ಮಕ್ಕಳ ಪ್ರಪಂಚ ಅಮ್ಮ-ಅಪ್ಪ-ಮಗು ಅಷ್ಟೆಯೇ ಎಂದು ಬಹಳಷ್ಟು ಬಾರಿ ನಾನು ಯೋಚಿಸಿದ್ದುಂಟು (ಹಿಂದೆ ನಾನೇನು ಮಾಡುತ್ತಿದ್ದೆ ಎಂಬುದು ನೆನಪಿಲ್ಲ ನೋಡಿ…). ಸಾಮಾನ್ಯವಾಗಿ ಅಷ್ಟು ಸಣ್ಣ ಮಕ್ಕಳ ಗಮನವನ್ನು ಹೆಚ್ಚು ಕಾಲ ಒಂದೇ ವಿಷಯದ ಬಗ್ಗೆ ಹಿಡಿದಿಡುವುದು ಕಷ್ಟ. ಆದರೆ ಇಡೀ ದಿನ ಅದೇ ಆಟ ಆಡುವಾಗ, ಅದರ ಕುರಿತೇ ಮಾತನಾಡುವಾಗ ಕುಟುಂಬ ಎನ್ನುವ ಬಗ್ಗೆ ಆ ಪುಟ್ಟ ಮರಿಗಳಿಗೆ ಅದಿನ್ನೆಂಥ ಕಲ್ಪನೆಗಳಿರಬಹುದು ಎಂದು ಸೋಜಿಗವಾಗುತ್ತದೆ. ಕುಟುಂಬ ಎನ್ನುವ ಬೆಚ್ಚನೆಯ ವ್ಯವಸ್ಥೆ ಅವುಗಳ ಮೇಲೆ ಅದೆಷ್ಟು ಪರಿಣಾಮ ಬೀರಿದೆಯಲ್ಲ ಎಂದು ಯೋಚಿಸುವಂತಾಗುತ್ತದೆ.

ಆದರೆ ಈ ಪಶ್ಚಿಮ ದೇಶಗಳಲ್ಲಿ ಹೆಚ್ಚಿನ ಮಕ್ಕಳು ಕಣ್ತೆರೆಯುವ ಹೊತ್ತಿಗೇ ಕುಟುಂಬ ಚೂರಾದಾಗ, ಕುಟುಂಬದ ಚೌಕಟ್ಟಿನಿಂದ ಹೊರಗೇ ಮಕ್ಕಳು ಹುಟ್ಟಿದಾಗ ಅಥವಾ ಹುಟ್ಟಿದ ಕೆಲವೇ ದಿನಗಳಲ್ಲಿ ಆ ಬೆಚ್ಚನೆಯ ಗೂಡು ಕರಗಿ ಹೋದಾಗಆ ಮಕ್ಕಳು ಎಂಥ ಆಟ ಆಟಬಹುದು? ತಮ್ಮ ಬೊಂಬೆಗಳಲ್ಲಿ ಯಾರನ್ನು ಅರಸಬಹುದು?

ಇಲ್ಲಿನ ಬದುಕು ನೋಡಿದಾಗ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇರುವುದಿಲ್ಲ ಎಂಬುದು ಅರಿವಾಗಿದೆ.

ದಿನ ಮೈಸೂರಿನ ಕಲಾಮಂದಿರದಲ್ಲಿ ಎನ್ಐಐಟಿಯಅಫಿನಿಟಿ ಡೇ‘. ನೂರಾರು ಯುವಕ ಯುವತಿಯರು ಹುರುಪಿನಿಂದ ಸೇರಿದ್ದರು. ಸಂಜೆ ಇಳಿಯುತ್ತಿದ್ದಂತೆ ನೆರೆದವರ ಉತ್ಸಾಹ ಏರುತ್ತಿತ್ತು. ಯುವ ಜನತೆಯ ಅಭಿರುಚಿಗೆ ಹೊಂದುವಂತಹ ಕಾರ್ಯಕ್ರಮಗಳೇ ಹೆಚ್ಚಾಗಿದ್ದರಿಂದ ಸಂಜೆ ಕಳೆಕಟ್ಟಿತ್ತು. ಕೊನೆಯ ಕಾರ್ಯಕ್ರಮದಲ್ಲಿ ‘Jewel Thief’ ಚಿತ್ರದಲ್ಲಿ ವೈಜಯಂತಿ ಮಾಲಾಳ ಧಿರಿಸಿನಲ್ಲಿದ್ದ ಆಕೆಹೋಟೋಂಪೆ ಐಸಿ ಬಾತ್ ಮೆ ದಬಾಕೆ ಚಲಿ ಆಯಿ…’ ಹಾಡಿಗೆ ಹೆಜ್ಜೆ ಹಾಕುತ್ತಿದ್ದಳು.

ಕಾರ್ಯಕ್ರಮಕ್ಕಾಗಿ ನಮ್ಮ ತಂಡದಲ್ಲಿ ಒಂದಾಗಿ ಅಭ್ಯಾಸ ನಡೆಸಿದ, ಗ್ರೀನ್ ರೂಮಿನಲ್ಲಿ ಚುರುಕಾಗಿ ಓಡಾಡಿ ಉಳಿದವರಿಗೆ ನೆರವಾಗಿ ಕೊನೆಗೆ ಅವರಿಗಿಂತ ಮೊದಲೇ ತಯಾರಾಗಿ, ಉತ್ಸಾಹದ ಚಿಲುಮೆಯಂತಿದ್ದ ಹುಡುಗಿಯ ಮುಖ ಕಣ್ಣಿಗೆ ಕಟ್ಟಿದಂತಿದೆ. ತನ್ನೊಂದಿಗೆ ದೇವಾನಂದ್ ಪಾತ್ರ ಮಾಡುತ್ತಿದ್ದ ಹುಡುಗ ತೀರಾ ಉದ್ದ ಎಂದು ದೂರಿ, ಅವನ ಬದಲಿಗೆ ಬಂದವನಿಗೆ ಹೆಜ್ಜೆಯೇ ಹಾಕಲು ಬಾರದು ಎಂದು ಕೊರಗಿ, ಕೊನೆಗಂತೂಷೋಮುಗಿಸಿಕೊಟ್ಟಿದ್ದಳು. ಕಳೆದೊಂದು ವಾರದಿಂದ ಅವಳ ಫೋಟೊ ಬಹಳಷ್ಟು ಪತ್ರಿಕೆಗಳಲ್ಲಿ ಬಂದಿದ್ದರಿಂದ ಎಲ್ಲಾ ಘಟನೆಗಳು ನೆನಪಾದವು.

ಅವಳ ಫೋಟೊ ಪತ್ರಿಕೆಗಳಲ್ಲಿ ಬರುವುದೇನೂ ಹೊಸದಲ್ಲ. ಹಿಂದೆಯೂ ಸಾಕಷ್ಟು ಬಾರಿ ನೋಡಿದ್ದೇನೆ. ಆದರೆ ಆಗ ರೀತಿ ವಿಷಾದ ಆವರಿಸಿರಲಿಲ್ಲ. ಎನ್ಐಐಟಿಯಲ್ಲಿ ಸಿಕ್ಕಿದ್ದ ಕಾಲಕ್ಕವಳು ಇನ್ನೂ ಪಿಯುಸಿ ಓದುತ್ತಿದ್ದಳು. ಆಗಲೇ ಮಾಡೆಲಿಂಗ್ ಹುಚ್ಚು ಹತ್ತಿಸಿಕೊಂಡು ಓಡಾಡುತ್ತಿದ್ದಳು. ನೃತ್ಯದಲ್ಲಿ ಗತಿಯೂ ಇತ್ತು, ಜೊತೆಗೆ ತಾನು ವಸುಂಧರಾ ಅವರ ಶಿಷ್ಯೆ ಎಂದು ಹೆಮ್ಮೆಪಡುತ್ತಿದ್ದಳು. ಯಾವತ್ತಿಗೂ ಚೆಂದಕ್ಕೆ ಡ್ರೆಸ್ ಮಾಡಿಕೊಂಡು ಮೇಕಪ್ಪಿನಲ್ಲೇ ಇರುತ್ತಿದ್ದ ಅವಳನ್ನುಇಷ್ಟೊಂದು ಮೇಕಪ್ ಹೊತ್ತುಕೊಂಡೇ ಮಲಗ್ತೀಯಾ?’ ಎಂದು ಕಾಡುತ್ತಿದ್ದೆವು. ಯಾವುದಕ್ಕೂ ಬೇಸರಿಸದೆ ಕಮಾನ್ಎಂದು ಚೆಂದದ ನಗೆ ಬೀರುತ್ತಿದ್ದಳು. ಮಣಿ ಅಂಗಡಿಗೆ ದಾಳಿಯಿಟ್ಟು ಬರಗಾಲ ದೇಶದಿಂದ ಬಂದವರಂತೆ ನಾವೆಲ್ಲಾ ಕಟ್ಲೆಟ್, ಪಾನಿಪುರಿ, ಮಸಾಲೆಪುರಿ ತಿನ್ನುವಾಗಟೂ ಮಚ್ ಆಫ್ ಕ್ಯಾಲರೀಸ್ಎಂದು ಭೇಲ್ ಪುರಿಯಲ್ಲಿ ತೃಪ್ತಿ ಹೊಂದುತ್ತಿದ್ದಳು. ತನ್ನ ಟ್ರೆಂಡಿ ಜಾಕೆಟ್ ಮತ್ತು ಹ್ಯಾಂಡ್ ಬ್ಯಾಗ್ ಗಳು ಎಲ್ಲೆಲ್ಲಿಂದ ಬಂದಿದ್ದು ಎಂಬ ಜಂಬಭರಿತ ಲಿಸ್ಟನ್ನು ಕೇಳುವ ಮುನ್ನವೇ ಕೊಡುತ್ತಿದ್ದಳು. ಕೈನೆಟಿಕ್ ನಲ್ಲಿ ಸುತ್ತಾಡುತ್ತಿದ್ದ ಅವಳಿಗೆ ಕಾಲೇಜು, ಕ್ಲಾಸು ಇವೆಲ್ಲಾ ತನಗಲ್ಲ ಎಂಬ ದೃಢ ನಂಬಿಕೆಯೂ ಇತ್ತು!

ಎನ್ಐಐಟಿಯಲ್ಲಿ ನಾನು ಕಡಿದು ಕಟ್ಟೆ ಹಾಕಿದ್ದು ಮುಗಿದಿತ್ತು. ಅವಳ ಕೋರ್ಸ್ ಮುಗಿಯಿತಾಗೊತ್ತಿಲ್ಲ. ನಂತರ ಮಾತಿಗೆಲ್ಲೂ ಸಿಗದಿದ್ದರೂ ಚಲನಚಿತ್ರಗಳಲ್ಲಿ ಅವಕಾಶ ಸಿಕ್ಕಿದ್ದು ತಿಳಿಯಿತು. ಹಾಗೊಂದಿಷ್ಟು ಬಾರಿ ಸಿನೆಮಾ ಪುಟಗಳಲ್ಲಿ ಅವಳ ಫೋಟೊಗಳೂ ಬಂದವು. ಅಂತೂ ಹುಡುಗಿ ರಯಿಸುತ್ತಿದ್ದಾಳೆ ಎಂದುಕೊಂಡು ಮರೆತುಬಿಟ್ಟಿದ್ದೆ. ಆದರೆ ಬಾರಿ ಅವಳ ಫೋಟೊ ಬಂದಾಗ ಅದಕ್ಕೆ ಯಾವುದೇ ಸಿನೆಮಾದ ಶೀರ್ಷಿಕೆ ಇರಲಿಲ್ಲ, ಬದಲಿಗೆಕಿಲ್ಲರ್, ಹಂತಕಿಎಂಬೆಲ್ಲಾ ಹಣೆಪಟ್ಟಿಯಿತ್ತು. ಜೊತೆಗೆ, ಮರಿಯಾ ಮೋನಿಕಾ ಎಂಬ ನಟಿಯ ಪ್ರವರಗಳೂ ಇದ್ದವು.

ಚೆಂದದ ನಗುವಿನ, ತುಂಟ ಕಣ್ಣಿನ, ಮಹತ್ವಾಕಾಂಕ್ಷೆಯ ಹುಡುಗಿ ಈಗ ಏನೆಲ್ಲಾ ಆಗಿಹೋದಳು, ಯಾವ ಮಟ್ಟಕ್ಕೆ ಇಳಿದುಹೋದಳು ಎಂದು ಒಮ್ಮೆ ತೀರಾ ಬೇಸರವಾಯಿತು. ಬಣ್ಣದ ಲೋಕದ ಹಣೆಬರವೇ ಅಷ್ಟು ಎಂಬ ಅರ್ಧ ಸತ್ಯದ, ಔಪಚಾರಿಕ ಸಮಾಧಾನವನ್ನೂ ಮಾಡಿಕೊಂಡೆ. ಬೇಡ ಬೇಡ ಎಂದುಕೊಂಡೇ ಪ್ರಕರಣದ ಹಿಂದು-ಮುಂದೆಲ್ಲಾ ಪತ್ರಿಕೆಗಳಲ್ಲಿ ಓದಿದೆ. ಅವಳನ್ನು ಘಟನಾ ಸ್ಥಳಕ್ಕೆ ಕರೆದೊಯ್ದ ಪೊಲೀಸರು ಇಡೀ ಘಟನೆಯ ಮರುಸೃಷ್ಟಿ ಮಾಡುತ್ತಿದ್ದಾರೆ ಎಂದೆಲ್ಲಾ ಪತ್ರಿಕೆಗಳಲ್ಲಿ ಬರೆದಿತ್ತು.

ಹಾಗೆಯೇ ಕಳೆದು ಹೋದ ಸಮಯವನ್ನೂ ತಿದ್ದಿ, ಸರಿಪಡಿಸಿ ಮರುಸೃಷ್ಟಿ ಮಾಡಲಾಗುವಂತಿದ್ದರೆ… ನನ್ನ ಯೋಚನೆಗೆ ನನಗೇ ನಗು ಬರುತ್ತಿದೆ.

 

Older Posts »

Follow

Get every new post delivered to your Inbox.